Wednesday, April 23, 2008

"ಗುರುವಿನ" ಭೇಟಿ....



ಸುಳ್ಯದ ಮಾಜಿ ಶಾಸಕ ಬಿ ಜೆ ಪಿ ಅಭ್ಯರ್ಥಿ ಎಸ್.ಅಂಗಾರ ಮಂಗಳವಾರದಂದು ರಾತ್ರಿ ಸುಳ್ಯ ತಾಲೂಕಿನ ಪಂಜ ಬಳಿಯ ಕರಿಕಳದ ಪೆರಿಯಪ್ಪು ರಾಮ ಭಟ್ಟರ ಮನೆಯಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ಇವರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ, ಸುಳ್ಯ ವಿಹಿಂಪ ಅಧ್ಯಕ್ಷ ಕೃಷ್ಣ ಪ್ರಸಾದ ಮಡ್ತಿಲ ಉಪಸ್ಥಿತರಿದ್ದರು.

ಕವಿ ಎಲ್ಲರ ಮನಸ್ಸಿಗೆ ಹುಮ್ಮಸ್ಸು ನೀಡಬಲ್ಲ - ರಾಘವೇಶ್ವರ ಶ್ರೀ


ಲಷ್ಕರಿ ಪ್ರಶಸ್ತಿ ಪ್ರದಾನ ಸಮಾರಂಭ


ಜೀವನದಲ್ಲಿ ನಿರಾಸೆ,ಹತಾಶೆಗಳು ತುಂಬಿಕೊಂಡಾಗ ಕವಿತೆ ,ವಚನ,ಕಾವ್ಯಗಳು ಬದುಕಿಗೆ ನವಚೈತನ್ಯ,ಸ್ಫೂರ್ತಿ ತಂದುಕೊಡಬಲ್ಲವು ಆದುದರಿಂದ ಕವಿಗಳಾದವರಿಗೆ ಎಲ್ಲರ ಬದುಕಿನಲ್ಲಿ ಹುಮ್ಮಸ್ಸು ತರಬಲ್ಲ ಶಕ್ತಿಯಿದೆ ಎಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಅವರು ಕರಿಕಳದ ಪೆರಿಯಪ್ಪುವಿನಲ್ಲಿ ನಡೆದ ಪಂಜ ಸೀಮಾ ಸಮ್ಮಿಲನ ಮತ್ತು ವೇ|ಮೂ|ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿ -2007 ಪ್ರದಾನ ಸಮಾರಂಭದಲ್ಲಿ ಕವಿ ಕೆ.ಪರಮೇಶ್ವರ ಭಟ್ಟ ಬಾಳಿಲ ಇವರಿಗೆ ಪ್ರದಾನ ಮಾಡಿದ ಬಳಿಕ ಆಶೀರ್ವಚನ ನೀಡುತ್ತಿದ್ದರು.

ಸಮಾಜದಲ್ಲಿ ಬದಲಾವಣೆಗಳು ಸಕಾರಾತ್ಮಕವಾಗಿರಬೇಕು ಬದಲಾವಣೆಗಳಿಗಾಗಿ ಬದಲಾವಣೆಗಳು ಬೇಡ ಎಂದ ಶ್ರೀಗಳು ಎಲ್ಲರ ಗುರಿ ರಾಮರಾಜ್ಯವಾಗಿರಲಿ ಅದಕ್ಕಾಗಿ ಸಾತ್ವಿಕತೆಯ ಶಕ್ತಿಯ ಸಂಚಾರ ಎಲ್ಲೆಡೆಯಾಗಲಿ ಎಂದು ಶ್ರೀಗಳು ಹೇಳಿದರು.

ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಭಾಷಾರಕ್ಷಣೆಯ ಉದ್ದೇಶದಿಂದ ಮಾತ್ರಾ ಪರಮೇಶ್ವರ ಭಟ್ಟರು ಮಹಾಕಾವ್ಯಗಳನ್ನು ಬರೆದರೆಂದು ಯಾರೂ ಪಕ್ಕನೆ ಭಾವಿಸಬಾರದು ಇದು ಅನನ್ಯ ಸುಂದರ ಸಂಸ್ಕೃತಿಯೊಂದರ ಉಳಿವಿಗಾಗಿ ಕೈಗೊಂಡಿರುವ ಮಹಾಕಾಯಕ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಹಿತ್ಯ - ಸುಬ್ರಾಯ ಚೊಕ್ಕಾಡಿ, ಯಕ್ಷಗಾನ-ಪದ್ಯಾಣ ಗಣಪತಿ ಭಟ್, ವೇದ- ಪುರೋಹಿತ ನಾಗರಾಜ ಭಟ್, ಶಿಲ್ಪಶಾಸ್ತ್ರ - ಮಹೇಶ ಮುನಿಯಂಗಳ ಹಾಗೂ ಎಸ್.ಎಂ.ಪ್ರಸಾದ ಮುನಿಯಂಗಳ, ಕಲೆ-ಬೇರ್ಯ ನಾರಾಯಣ ಭಟ್ಟ, ಸಾಮಾಜಿಕ - ಎನ್.ಎಸ್.ಸುವರ್ಣಿನಿಯವರನ್ನು ಗುರುತಿಸಲಾಯಿತು.ನಂತರ ಆತ್ರತ್ರಾಣ ನಿಧಿಯನ್ನು ಬಾಳಿಲದ ಕೃಷ್ಣಪ್ಪ ಮೂಲ್ಯರ ಪುತ್ರ ಪ್ರತಿಭಾವಂತ ವಿದ್ಯಾರ್ಥಿ ಅಮಿತ್ ನಿಗೆ ನೀಡಲಾಯಿತು.ಇದೇ ಸಂದರ್ಭದಲ್ಲಿ ವರ್ಷದ ವಲಯವನ್ನಾಗಿ ಸುಳ್ಯವನ್ನು ಘೋಷಿಸಲಾಯಿತು.

ಸನ್ಮಾನಿತರ ಪರವಾಗಿ ಪರಮೇಶ್ವರ ಭಟ್ಟ ಬಾಳಿಲ ಹಾಗೂ ಸುಬ್ರಾಯ ಚೊಕ್ಕಾಡಿ ಮಾತನಾಡಿದರು.

ಪಂಜ ಸೀಮಾ ಪರಿಷತ್ ಅಧ್ಯಕ್ಷ ರಾಧಾಕೃಷ್ಣ ಕೋಟೆ ಸ್ವಾಗತಿಸಿ ಸೀಮಾ ಕಾರ್ಯದರ್ಶಿ ಸುರೇಶ್ಚಂದ್ರ ವರದಿ ವಾಚಿಸಿದರು.ವಸಂತ ಭೀಮಗುಳಿ ವಂದಿಸಿದರು.ಮುರಳೀಕೃಷ್ಣ ಚಳ್ಳಂಗಾರು ಕಾರ್ಯಕ್ರಮ ನಿರ್ವಹಿಸಿದರು.



ಬಾಳಿಲದ ಕೃಷ್ಣಪ್ಪ ಮೂಲ್ಯರ ಸುಪುತ್ರ ಪ್ರತಿಭಾವಂತ ವಿದ್ಯಾರ್ಥಿ ಅಮಿತ್ ನಿಗೆ ಆರ್ತತ್ರಾಣ ನಿಧಿ ಸಮರ್ಪಣೆ.ಅಮಿತ್ ಕಾಲುಗಳಲ್ಲಿ ಶಕ್ತಿಕುಂದಿ ನಡೆದಾಡಲು ಕಷ್ಟವಾಗುತ್ತಿದ್ದಾಗಲೂ ಆತ SSLCಯಲ್ಲಿ ಶೇ.92 ಅಂಕ ಪಡೆದಿದ್ದಾನೆ




ಸಾಹಿತಿ,ಕವಿ ಸುಬ್ರಾಯ ಚೊಕ್ಕಾಡಿಯವರನ್ನು ಗುರುತಿಸುತ್ತಿರುವುದು..



ಚಿತ್ರಗಳೆಲ್ಲಾ ನನ್ನವೇ...

Wednesday, April 16, 2008

ಗುತ್ತಿಗಾರು :ವೇದಶಿಬಿರ ಉದ್ಘಾಟನೆ




ಪಂಜಸೀಮಾ ಗುತ್ತಿಗಾರು ವಲಯ ಪರಿಷತ್ತು ಹಾಗೂ ಅನೂಚಾನ ವಿದ್ಯಾಪ್ರತಿಷ್ಠಾನದ ವತಿಯಿಂದ ಗುತ್ತಿಗಾರಿನ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರದಂದು ವಸಂತ ವೇದ ಶಿಬಿರವು ಉದ್ಘಾಟನೆಗೊಂಡಿತು.

ವೇದ ಶಿಬಿರವನ್ನು ವೇದಮೂರ್ತಿ ಕರುವಜೆ ಕೇಶವ ಜೋಯಿಸ ಉದ್ಘಾಟಿಸಿ "ವೇದವು ಮನುಷ್ಯ ಬದುಕಿಗೆ ಅಗತ್ಯವಾಗಿರುವ ಅನೇಕ ವಿಚಾರಗಳನ್ನು ತಿಳಿಸಿದೆ" ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ ಗ್ರಾಮಣಿ ಕೆ.ಎಂ.ತಿಮ್ಮಪ್ಪಯ್ಯ ಮಾತನಾಡಿ "ನಮ್ಮ ಬುದ್ದಿಯನ್ನು ಪ್ರಚೋದಿಸಿ ಮಾನವ ಬದುಕು ಸಾರ್ಥಕವಾಗಲು ವೇದ ಸಹಕಾರಿ" ಎಂದರು.

ಅನೂಚಾನ ವಿದ್ಯಾಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಭಟ್ ಗುಂಡಿಮಜಲು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಸೀಮಾ ಗ್ರಾಮಣಿ ಮೊಗ್ರ ಸತ್ಯನಾರಾಯಣ ಉಪಸ್ಥಿತರಿದ್ದರು.ವೇದ ಶಿಬಿರದ ಆರಂಭಕ್ಕೆ ಮುನ್ನ ಗಾಯತ್ರೀ ಪುರಶ್ಚರಣೆ ಆರಂಭಗೊಂಡಿತು.

ಗುತ್ತಿಗಾರು ವಲಯ ಪರಿಷತ್ತು ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ,ಗುತ್ತಿಗಾರು ಗ್ರಾಮ ಪರಿಷತ್ತು ಕಾರ್ಯದರ್ಶಿ ಕುಮಾರ ಸ್ವಾಮಿ ಮೇಲ್ತೋಟ ವಂದಿಸಿದರಿ.ಅನೂಚಾನ ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕಮ ನಿರ್ವಹಿಸಿದರು.



ವೇದಶಿಬಿರ ಒಂದು ನೋಟ

Wednesday, April 9, 2008

ವೇದ ಶಿಬಿರ ಮತ್ತು ಪ್ರಶಸ್ತಿ ಪ್ರದಾನ

ಏ.15 ರಿಂದ ಗುತ್ತಿಗಾರಿನಲ್ಲಿ ವೇದ ಶಿಬಿರ

ಪಂಜಸೀಮಾ ಗುತ್ತಿಗಾರು ವಲಯ ಪರಿಷತ್ತು ಇದರ ವತಿಯಿಂದ ಅನೂಚಾನ ವಿದ್ಯಾ ಪ್ರತಿಷ್ಠಾನದ ಸಹಯೋಗದೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಏ.15 ರಿಂದ 40 ದಿನಗಳ ಕಾಲ ವಸಂತ ವೇದ ಶಿಬಿರವು ನಡೆಯಲಿದೆ.

ಕಳೆದ ಹಲವು ವರ್ಷಗಳಿಂದ ವಳಲಂಬೆಯಲ್ಲಿ ನಡೆದುಕೊಂಡು ಬರುತ್ತಿರುವ ವಸಂತ ವೇದ ಶಿಬಿರದಲ್ಲಿ ಅನೇಕ ವಟುಗಳು ವೇದಾಧ್ಯಯನ ನಡೆಸಿದ್ದಾರೆ. ಈ ಕಾರ್ಯಕ್ಕೆ ವಳಲಂಬೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನ ಸಮಸ್ತರು ಪೂರ್ಣ ಸಹಕಾರವನ್ನೂ ನೀಡುತ್ತಿದ್ದು ಈ ಬಾರಿಯ ವೇದ ಶಿಬಿರದ ಉದ್ಘಾಟನೆಯನ್ನು ವೇದಮೂರ್ತಿ ಕೇಶವ ಜೋಯಿಸರು ನೆರವೇರಿಸಲಿದ್ದು ಅನೂಚಾನ ವಿದ್ಯಾಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶ್ರೀಕೃಷ್ಣ ಭಟ್ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಿಬಿರದ ಉದ್ಘಾಟನೆಯಂದು ಮಹಾಸಂಕಲ್ಪ ಪೂರ್ವಕ ಗಾಯತ್ರೀ ಪುರಶ್ಚರಣೆ ಪ್ರಾರಂಭವಾಗಿ ಶಿಬಿರದ ಸಮಾರೋಪದಂದು ಗಾಯತ್ರೀ ಹವನ ನಡೆಯಲಿದೆ.
.....................................................................................


ಏ 22 ರಂದು ಲಷ್ಕರಿ ಪ್ರಶಸ್ತಿ ಪ್ರದಾನ

ಪಂಜಸೀಮಾ ಪರಿಷತ್ ಸೀಮಾಸಮ್ಮಿಲನ ಮತ್ತು ವೇ|ಮೂ| ಲಷ್ಕರಿ ಕೇಶವ ಭಟ್ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವು ಏ.22 ರಂದು ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಸುಳ್ಯ ತಾಲೂಕು ಕರಿಕಳದಲ್ಲಿರುವ ಪೆರಿಯಪ್ಪು ರಾಮ ಭಟ್ಟರ ಮನೆಯಲ್ಲಿ ನಡೆಯಲಿದೆ.

ಈ ಬಾರಿಯ ಲಷ್ಕರಿ ಪ್ರಶಸ್ತಿಗೆ ಕವಿ ಕೆ.ಪರಮೇಶ್ವರ ಭಟ್ಟ ಬಾಳಿಲ ಆಯ್ಕೆಯಾಗಿದ್ದು ಸಮಾರಂಭದಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಅಭಿನಂದನಾ ಮಾತುಗಳನ್ನಾಡುವರು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುತ್ತದೆ. ಸಾಹಿತ್ಯ -ಸುಬ್ರಾಯ ಚೊಕ್ಕಾಡಿ, ಯಕ್ಷಗಾನ-ಪದ್ಯಾಣ ಗಣಪತಿ ಭಟ್, ವೇದ- ಪುರೋಹಿತ ನಾಗರಾಜ ಭಟ್, ಶಿಲ್ಪಶಾಸ್ತ್ರ - ಮಹೇಶ ಮುನಿಯಂಗಳ ಹಾಗೂ ಎಸ್.ಎಂ.ಪ್ರಸಾದ ಮುನಿಯಂಗಳ, ಕಲೆ-ಬೇರ್ಯ ನಾರಾಯಣ ಭಟ್ಟ, ಸಾಮಾಜಿಕ - ಎನ್.ಎಸ್.ಸುವರ್ಣಿನಿ ಆಯ್ಕೆಯಾಗಿದ್ದಾರೆ.